Popular Posts

ಸಮಗ್ರ ಕೃಷಿಯಿಂದ ಸಮೃದ್ಧ ಜೀವನ




ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡಿರುವ ರಾಮನಗರ ತಾಲೂಕಿನ ಮಾಯಗಾನಹಳ್ಳಿ ಸಮೀಪದ ಧಾರಪುರ ಗ್ರಾಮದ ಕಮಲಮ್ಮ ಅವರು ಯೋಜಿತ ಬೇಸಾಯದ ಮೂಲಕ ಲಾಭದ ದಾರಿಯಲ್ಲಿ ಸಾಗುತ್ತಿದ್ದಾರೆ.


ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡಿರುವ ರಾಮನಗರ ತಾಲೂಕಿನ ಮಾಯಗಾನಹಳ್ಳಿ ಸಮೀಪದ ಧಾರಪುರ ಗ್ರಾಮದ ಕಮಲಮ್ಮ ಅವರು ಯೋಜಿತ ಬೇಸಾಯದ ಮೂಲಕ ಲಾಭದ ದಾರಿಯಲ್ಲಿ ಸಾಗುತ್ತಿದ್ದಾರೆ.

ತಮ್ಮ 10 ಎಕರೆ ಜಮೀನಿನಲ್ಲಿ ಪತಿ ಎಂ.ಕೆ.ನಾಗರಾಜಯ್ಯ ಹಾಗೂ ಕುಟುಂಬ ಸದಸ್ಯರ ಸಹಕಾರದೊಂದಿಗೆ ನೂತನ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕೃಷಿ, ತೋಟಗಾರಿಕೆ ಹಾಗೂ ಕೃಷಿ ಆಧಾರಿತ ಉಪ ಕಸುಬುಗಳಲ್ಲಿ ಕಮಲಮ್ಮ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.

ಕಾಲಕಾಲಕ್ಕೆ ಜಮೀನಿನ ಮಣ್ಣು ಮತ್ತು ನೀರಿನ ಪರೀಕ್ಷೆ ನಡೆಸಿ, ಕೊರತೆ ಇರುವ ಪೋಷಕಾಂಶಗಳನ್ನು ನೀಡುವುದರಿಂದ ಕಮಲಮ್ಮ ಅವರಿಗೆ ಕೃಷಿ ಕೈಕೊಟ್ಟಿದ್ದೇ ಇಲ್ಲ. ಉಪಕಸುಬುಗಳಾದ ಪಶುಸಂಗೋಪನೆ, ಕುರಿ, ಕೋಳಿ ಸಾಕಣೆ, ಮೀನುಗಾರಿಕೆ, ನಾಟಿ ಮೊಲ ಹಾಗೂ ಜೇನು ಸಾಕಣೆಯಲ್ಲೂ ಕಮಲಮ್ಮ ಯಶಸ್ಸು ಗಳಿಸಿದ್ದಾರೆ.

ಸಮಗ್ರ ಕೃಷಿ ಪದ್ಧತಿ: ಸಮಗ್ರ ಕೃಷಿ ಪದ್ಧ್ದತಿಯಡಿ ವಿವಿಧ ತಳಿಯ ರಾಗಿ, ಭತ್ತ, ತೊಗರಿ, ಅಲಸಂದೆ, ಎಳ್ಳು, ಹುರಳಿ, ಉದ್ದು, ಮುಸುಕಿನ ಜೋಳ, ನೆಲಗಡಲೆ, ಸೂರ್ಯಕಾಂತಿ, ಹೆಬ್ಬಾಳ ಅವರೆ, ಹರಳು ಬೆಳೆಗಳ ಜತೆಗೆ ಸಿರಿಧಾನ್ಯಗಳಾದ ಸಾಮೆ, ನವಣೆಗಳನ್ನೂ ಬೆಳೆದು ಸೈ ಎನಿಸಿಕೊಂಡಿದ್ದಾರೆ.
ತೋಟಗಾರಿಕೆ ಬೆಳೆಗಳು: ತೋಟಗಾರಿಕೆ ಬೆಳೆಗಳಾದ ಮಾವು, ತೆಂಗು, ಸೀತಾಫಲ, ಬ್ಯಾಲ, ಬಾಳೆ, ಪಪ್ಪಾಯಿ, ಹಲಸು, ನಿಂಬೆ, ಮೋಸಂಬಿ, ಕಿರಳಿಕಾಯಿ, ಬೆಟ್ಟದ ನೆಲ್ಲಿ, ತರಕಾರಿ ಬೆಳೆಗಳಾದ ಬಣ್ಣದ ದಪ್ಪ ಮೆಣಸಿನಕಾಯಿ, ಟೊಮೋಟ, ಹುರಳಿ, ಬದನೆ, ಕುಂಬಳಕಾಯಿ ಬೆಳೆಯುವುದರ ಜತೆಗೆ ರೇಷ್ಮೆ ಕೃಷಿಯಲ್ಲೂ ತೊಡಗಿಕೊಂಡಿದ್ದಾರೆ.

ಬಿತ್ತನೆಗೆ ಮೊದಲು ವೈಜ್ಞಾನಿಕವಾಗಿ ಬೀಜೋಪಚಾರ ಮಾಡುವುದು, ಎರೆಹುಳು ಗೊಬ್ಬರ, ಸಾವಯವ ಗೊಬ್ಬರವನ್ನು ಕೃಷಿಯಲ್ಲಿ ಬಳಸುವುದು ಕಮಲಮ್ಮ ಯಶಸ್ಸಿಗೆ ನೆರವು ನೀಡಿದೆ.
ನೀರಿನ ಮಿತ ಬಳಕೆ: ಮಳೆ ನೀರಿನ ಸದ್ಬಳಕೆಗೆ ಮಹತ್ವ ನೀಡಿರುವ ಕಮಲಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿ, ಒಂದೇ ಒಂದು ಹನಿ ಮಳೆ ನೀರು ವ್ಯರ್ಥವಾಗದಂತೆ ಎಚ್ಚರಿಕೆ ವಹಿಸಿದ್ದಾರೆ.

ಸಂಗ್ರಹಗೊಂಡ ನೀರಿನ ಮಿತ ಬಳಕೆಗೆ ಹನಿ ಹಾಗೂ ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಬೆಂಗಳೂರು ಆಕಾಶವಾಣಿ ಕಾರ‍್ಯಕ್ರಮಗಳಲ್ಲಿ ಪಾಲ್ಗೊಂಡು, ತಮ್ಮ ಅನುಭವಗಳನ್ನು ಇತರ ರೈತರೊಂದಿಗೆ ಹಂಚಿಕೊಂಡಿರುವ ಕಮಲಮ್ಮ, ಹಲವು ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗೆ ಮೊ. 9900952192.